Sunday, June 03, 2012

ROMEO news

ಎಫ್‌ಎಂನಲ್ಲಿ ಕೇಳುಗರ ಮನಕದ್ದ ರೋಮಿಯೋ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ರೋಮಿಯೋ ಆಡಿಯೋ ಮಾರುಕಟ್ಟೆಗೆ ಪ್ರವೇಶಿಸಿದ್ದು ಸೀಡಿಗಳಿಗೆ ಸಖತ್ ಬೇಡಿಕೆ ಬಂದಿದೆ. ಎಫ್ಎಂ ರೇಡಿಯೋಗಳಲ್ಲೂ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶೇಖರ್.

ಶೇಯಾಘೋಷಾಲ್ ಹಾಡಿರುವ, ಕವಿರಾಜ್ ರಚನೆಯ "ಆಲೋಚನೆ ಆರಾಧನೆ" ಹಾಡು ಬಿಗ್ ಎಫ್ಎಂ ವಾಹಿನಿಯ ಟಾಪ್ 10 ಹಾಡುಗಳಲ್ಲಿ ಮೂರನೇ ಸ್ಥಾನ ಪಡೆದಿದೆ. ಪ್ರಚಾರಕ್ಕಾಗಿ ಸಿದ್ಧವಾಗಿರುವ ಸಂತು ರಚಿಸಿರುವ "ಬೆಳಗೆ ಎದ್ದು ಕಾಫಿ ಕುಡಿ ಏನಾದ್ರು ಹಲ್ಲುಜ ಬೇಡಿ ಮಲ್ಕೊಂಡೇ ಸ್ನಾನ ಮಾಡಿ ನನ್ನ ಹೆಸರೇ ರೋಮಿಯೋ" ಹಾಡು ಕೂಡ ಜನಪ್ರಿಯವಾಗಿದೆ. 

ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್, ಭಾವನಾ(ಜಾಕಿ), ಅವಿನಾಶ್, ಸಾಧುಕೋಕಿಲಾ, ರಮೇಶ್‌ಭಟ್, ಮಿತ್ರ ರಂಗಾಯಣ ರಘು, ಸುಧಾಬೆಳವಾಡಿ ಮುಂತಾದವರಿದ್ದಾರೆ. ಕೆ.ಎಸ್.ಪಿಕ್ಚರ್ಸ್ ಲಾಂಛನದಲ್ಲಿ ನವೀನ್(ನಾಯಕ) ಹಾಗೂ ರಮೇಶ್‌ಕುಮಾರ್ ನಿರ್ಮಿಸುತ್ತಿರುವ ಚಿತ್ರವಿದು. (ಒನ್‌ಇಂಡಿಯಾ ಕನ್ನಡ)


Image




ನನ್ನ ಕಾಲ ಮುಗಿದಿಲ್ಲ, ಮಾರ್ಕೆಟ್ ಇದೆ: ಗಣೇಶ್

'ಮುಂಗಾರು ಮಳೆ' ಬಿಡುಗಡೆಯಾದಾಗ ಗೋಲ್ಡನ್ ಸ್ಟಾರ್ ಗಣೇಶ್ ನಿಜಕ್ಕೂ ರೋಮಿಯೋ ಆಗಿದ್ದರು. ಪ್ರತಿ ಹುಡುಗಿಯ ಹೃದಯದಲ್ಲೂ ಗಣೇಶ್ ಜಾಗ ಮಾಡಿಕೊಂಡಿದ್ದರು. ಆದರೆ ಈಗಲೂ ಅವರನ್ನು 'ರೋಮಿಯೋ' ಎನ್ನಬಹುದೇ? ಯಾಕಿಲ್ಲ ಎಂದು ಪ್ರಶ್ನಿಸುತ್ತಾರೆ ಸ್ವತಃ ಗಣೇಶ್.

ಸಾಲು ಸಾಲು ಸೋಲುಗಳನ್ನೇ ಎದುರಿಸಿದ ಗಣೇಶ್ ಇನ್ನೂ ಅಸ್ತಿತ್ವ ಉಳಿಸಿಕೊಂಡಿರುವುದೇ ಅಚ್ಚರಿ. ಇಷ್ಟು ಸಿನಿಮಾಗಳಲ್ಲಿ ಸೋತ ನಂತರವೂ ಬೇಡಿಕೆ ಉಳಿಸಿಕೊಂಡ ನಟ ಬೇರೆ ಕಾಣುತ್ತಿಲ್ಲ. ಆದರೂ ಫ್ಲಾಪ್ ಹೀರೋ ಎಂಬ ಹಣೆಪಟ್ಟಿ ಇದೆಯಲ್ಲ? ದೊಡ್ಡ ದೊಡ್ಡ ನಿರ್ಮಾಪಕ-ನಿರ್ದೇಶಕರು ಹತ್ತಿರ ಬರುತ್ತಿಲ್ಲವಲ್ಲ?

ಈ ವಾದಗಳನ್ನು ಗಣೇಶ್ ಒಪ್ಪಿಕೊಳ್ಳುವುದಿಲ್ಲ. ಗೆದ್ದ ಚಿತ್ರಗಳತ್ತ ಬೊಟ್ಟು ಮಾಡಿ, ನನ್ನ ಕೆಲಸ ನಾನು ಮಾಡಿದ್ದೇನೆ ಎಂದು ನ್ಯಾಯಾಧೀಶರಾಗುತ್ತಾರೆ.

ನನ್ನ ಕೆಲವು ಚಿತ್ರಗಳು ಸೋತಿರಬಹುದು. ಹಾಗೆಂದು ನನಗೆ ಚಿತ್ರರಂಗದಲ್ಲಿ ಭವಿಷ್ಯವೇ ಇಲ್ಲ ಎಂದು ಮಾತನಾಡುವುದು ಎಷ್ಟು ಸರಿ? ಈಗಲೂ ನನ್ನಲ್ಲಿ ಮೂರು (ರೋಮಿಯೋ, ಮಿ.420, ಸಕ್ಕರೆ) ಸಿನಿಮಾಗಳಿವೆ. ನಿಮ್ಮ ಮಾತು ನಿಜವೇ ಆಗಿದ್ದರೆ, ಆ ನಿರ್ಮಾಪಕರು ನನ್ನ ಬಳಿ ಯಾಕೆ ಬರುತ್ತಿದ್ದರು? ನನ್ನ ಮಾರ್ಕೆಟ್ ಬಿದ್ದು ಹೋಗಿದೆ ಎಂಬ ವಾದವನ್ನು ನಾನು ಒಪ್ಪಿಕೊಳ್ಳಲಾರೆ.

ಮದುವೆ ಮನೆ ಗೆಲ್ಲಲಿಲ್ಲ, ಒಪ್ಪಿಕೊಳ್ಳುತ್ತೇನೆ. ಆದರೆ ಶೈಲೂವಿನಿಂದಾಗಿ ನಿರ್ಮಾಪಕರಿಗೆ ನಷ್ಟವಾಗಿಲ್ಲ. ಮುಂಜಾನೆ ಚಿತ್ರದಿಂದ ನಷ್ಟವಾಯಿತು ಎಂದು ನಿರ್ದೇಶಕ-ನಿರ್ಮಾಪಕ ಎಸ್. ನಾರಾಯಣ್ ಹೇಳುತ್ತಾರೆ. ಆದರೆ ಆ ಸೋಲಿಗೆ ನಾನು ಕಾರಣನಲ್ಲ.

ಚಿತ್ರೀಕರಣ ಸಂದರ್ಭದಲ್ಲೇ, ಕಥೆ ಎಲ್ಲೋ ಜಾರುತ್ತಿದೆಯಲ್ಲ ಎಂದು ಹೇಳಿದ್ದೆ. ಆದರೆ, ನನಗೆ ನನ್ನ ಕೆಲಸ ಗೊತ್ತು, ನೀವು ನಿಮ್ಮ ಕೆಲಸ ಮಾಡಿ ಎಂದು ನಾರಾಯಣ್ ಹೇಳಿದರು. ನಾನು ನನ್ನ ಕೆಲಸ ಮಾಡಿದ್ದೇನೆ. ಆದರೂ ಚಿತ್ರದ ಪ್ರಚಾರಕ್ಕೆ ನನ್ನನ್ನು ಆಹ್ವಾನಿಸಲಿಲ್ಲ. ಸೋತಾಗ ನಾನೇ ಕಾರಣ ಎಂದರು. ಅದೇ ಕಾರಣದಿಂದ ನಿರ್ದೇಶನಕ್ಕೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಹೇಳಿದರು.

ಹಾಗಾದರೆ ಇಂತಹ ವಿವಾದಗಳೇ ಗಣೇಶ್‌ರನ್ನು ಕುಬ್ಜರನ್ನಾಗಿಸಿವೆಯೇ? ಅದರಿಂದಾಗಿಯೇ ಗಣೇಶ್ ಈಗೀಗ ಮಾತಿಗೆ ಸಿಗುತ್ತಿಲ್ಲವೇ? ಇಲ್ಲ ಎಂದು ಅವರು ಹೇಳುತ್ತಿಲ್ಲ. ಪ್ರತಿ ಮಾತು ವಿವಾದವಾಗುತ್ತದೆ ಎನ್ನುವಾಗ ದೂರ ಉಳಿಯುವುದೇ ಲೇಸು ಎನ್ನುವುದು ಅವರು ಈಗ ಒಪ್ಪಿಕೊಂಡಿರುವ ಸಿದ್ಧಾಂತ.

ಹೀಗಿರುವ ಗಣೇಶ್ ಮುಂದೆ ಸದ್ಯ 'ರೋಮಿಯೋ' ಗೆಲ್ಲಿಸಬೇಕೆಂಬ ಏಕಮೇವೋದ್ದೇಶವಿದೆ. ಅದಕ್ಕಾಗಿ ಹೊಸ ನಿರ್ದೇಶಕರ ಜತೆ ಉತ್ಸಾಹದಿಂದಲೇ ಕೆಲಸ ಮಾಡುತ್ತಿದ್ದಾರೆ. ಪಾಪ್ ಶೈಲಿಯ ವಿಶೇಷ ಪ್ರಚಾರದ ಹಾಡೊಂದನ್ನು ಈಗಾಗಲೇ ರೋಮಿಯೋ ಟೀಮ್ ಬಿಡುಗಡೆ ಮಾಡಿದೆ. 

No comments: